ಕಣ್ತುಂಬಿದ “ಕೇಳು ಪುಸ್ತಕ”

Posted ನವೆಂಬರ್ 26, 2007 by bookbazaar
ವರ್ಗಗಳು: ಕಲರವ

ಕವಿ ಜಿ ಎನ್ ಮೋಹನ್ ಅವರ “ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ” ಕವನ ಸಂಕಲನದ ಸಿ.ಡಿ. ರೂಪ “ಕೇಳು ಪುಸ್ತಕ” ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಬಿಡುಗಡೆ ಸಮಾರಂಭದ ಕೆಲವು ಕ್ಷಣಗಳು ಇಲ್ಲಿವೆ. 

[rockyou id=92711379&w=426&h=320]

ಸಂಘರ್ಷ ಪರಂಪರೆಯ ಭವ

Posted ನವೆಂಬರ್ 26, 2007 by bookbazaar
ವರ್ಗಗಳು: ಅಮೃತಕ್ಕೆ ಗರುಡ

suri.jpgಎನ್ನ ಭವದ ಕೇಡು
ಲೇ: ಎಸ್ ಸುರೇಂದ್ರನಾಥ್
ಪ್ರ: ಛಂದ ಪುಸ್ತಕ, ಬೆಂಗಳೂರು
ಬೆಲೆ: ೭೫ ರೂ. ಪುಟಗಳು: ೨೩೬

———————————–

 

ವಿಜಿ

ನ್ನದೊಂದು ಕೂದಲೆಳೆಯಿಂದಲೇ, ಬೀಳುತ್ತಿದ್ದ ಮರವನ್ನು ತಡೆದು ನಿಲ್ಲಿಸಿದ ಗಟ್ಟಿ ಹೆಂಗಸಿನ ಕಥೆ ಕೇಳಿಸಿಕೊಳ್ಳುತ್ತ ಬೆಳೆದ ನನ್ನಂಥವನಿಗೆ “ಎನ್ನ ಭವದ ಕೇಡು” ಕಾದಂಬರಿಯ ಲೋಕ ಹತ್ತಿರದ್ದು ಎನ್ನಿಸುತ್ತದೆ. ಇದನ್ನು ಇನ್ನೂ ಹತ್ತಿರ ತಂದುಕೊಳ್ಳುವುದಕ್ಕೆ, ಇದರೊಳಗೆ ನಡೆದಾಡಿಕೊಂಡು ಏನು ಎತ್ತ ಎಂದು ಹುಡುಕುವುದಕ್ಕೆ ಯಾವ ಮ್ಯಾಜಿಕ್ ರಿಯಲಿಸಮ್ಮಿನ ಹಂಗೂ ಬೇಕಾಗಿಲ್ಲ.

ರಮಿಸುವ ಧಾಟಿಗಿಂತ ಆಕ್ರಮಣಗೈಯುವ, ಎಲ್ಲವನ್ನೂ ಒಂದೇ ಪಟ್ಟಿಗೆ ಸೂರೆಗೈದುಬಿಡುತ್ತೇನೆ ಎಂಬಂತೆ ಕುದಿಯುವ, ಬಿರುಗಾಳಿಯಂತೆ ಅಬ್ಬರಿಸಿ ಬರುವ ಕಥೆಗಳಲ್ಲೇ ಸ್ವಂತಿಕೆಯೆಂಬುದು ಒಂದು ಗುಂಜಿಯಷ್ಟಾದರೂ ಜಾಸ್ತಿಯೇನೊ. ಹಾಗೆಂದು ಇದು ಬಂಡಾಯ ಚಳವಳಿಯ ಕಥನ ಮಾದರಿಯೇನಲ್ಲ; ಬದಲಾಗಿ, ಕಥೆಯ ಅಂತರಂಗದಲ್ಲೇ ಇರಬಹುದಾದ, ಹಾಗೆ ನೋಡಿದರೆ ಪ್ರತಿಯೊಬ್ಬ ಮನುಷ್ಯನೊಳಗೂ ಇರಬಹುದಾದ, ಅಷ್ಟೇ ಏಕೆ, ಮೂಕ ಪ್ರಾಣಿಗಳೊಳಗೂ ಇರಬಹುದಾದ ಒಂದು ಬಗೆಯ ಸ್ಫೋಟಕ ಗುಣ. ಉದ್ದಕ್ಕೂ ಸಿಟ್ಟನ್ನು ಎಲ್ಲೂ ಪ್ರಕಟಗೊಳಿಸದ ಕಥೆಯೊಂದು ತನ್ನ ಅಂತಃಶಕ್ತಿಯಿಂದಲೇ ಕೆಂಡದಂಥ ಬಂಡಾಯದ ಅಸಾಧಾರಣ ರೂಪಕವಾಗಿ ನಿಲ್ಲಬಲ್ಲದು. ಇಂಥವುಗಳ ದಾರಿಯಲ್ಲಿ “ಎನ್ನ ಭವದ ಕೇಡು” ಹೇಳುವ ಕಥೆ, ಒಂದಿಡೀ ಜೀವಮಾನದೊಳಗಿನ ಮೋಹ, ಮಮಕಾರ, ವ್ಯಗ್ರತೆ, ನಿಷ್ಠುರತೆ, ಸ್ವಪ್ರತಿಷ್ಠೆ, ಸ್ವಾಭಿಮಾನ, ಸೇಡು, ದಾಹ -ಇವೆಲ್ಲವನ್ನೂ ಕೂಡಿಸಿಕೊಂಡು ಮಳೆಗಾಲದ ಬೆಟ್ಟದ ಹೊಳೆಯಂತೆ ಕಾಣಿಸುತ್ತದೆ. ಬೆಟ್ಟದ ಹೊಳೆ ನೋಡಲು ಪುಟ್ಟದೆನ್ನಿಸಿದರೂ ಹಾಯಲಾರದ ಹೊಳೆ. ನೀರಿಳಿಯುವವರೆಗೂ ಕಾಯುವ ತಾಳ್ಮೆಯನ್ನು ಹೇಳಿಕೊಡುವ ಹೊಳೆ. “ಎನ್ನ ಭವದ ಕೇಡು” ಇಂಥದೊಂದು ಕಾಯುವಿಕೆಯಲ್ಲೇ ಕದಲುವ, ಕನಲುವ ಕಥೆ.

ಈ ಕಥೆಯೊಳಗೆ ಪ್ರವೇಶಿಸುತ್ತಿದ್ದಂತೆ ಗಾಢವಾಗಿ ಆವರಿಸಿಕೊಳ್ಳುವ ಪಾತ್ರ ಮಾಮಿಯದು. ಆದರೆ, ಮಾಮಿಯ ಬದಲಾಗಿ ಸರಸ್ವತಿಯನ್ನು ಕೇಂದ್ರಪಾತ್ರವಾಗಿ ನೋಡುತ್ತ ಮುಂದುವರಿದರೆ ಹೇಗಿರುತ್ತದೆ ಎಂಬ ಕುತೂಹಲದೊಂದಿಗೆ ಈ ಕಥನದ ಹೆಜ್ಜೆ ಜಾಡನ್ನು ಕಂಡುಕೊಳ್ಳಬೇಕೆನ್ನಿಸುತ್ತದೆ ನನಗೆ. ಇಲ್ಲಿ ಮಾಮಿಯೇ ಎಲ್ಲವೂ ಅಲ್ಲ. ಅವಳಿಗೆ ಸಾವಿನ ವಾಸನೆ ಗೊತ್ತಾಗುತ್ತದೆ. ಆದರೆ ಅಡುಗೆ ಮನೆಯ ವಾಸನೆಯನ್ನೇ ಹಿಡಿದುಕೊಂಡು ಹುಟ್ಟಿ, ಅದರ ಸತತ ಸಹವಾಸದಲ್ಲೇ ಬೆಳೆದ ಸರಸ್ವತಿಯ ಜೀವನ್ಮುಖೀ ಗುಣ ನೇರವಾಗಿ ಮಾಮಿಗೆ ಕಡೆಯತನಕವೂ ಎದುರಾಗಿ ನಿಲ್ಲುವಂಥದ್ದು. ಸಾವಿನ ವಾಸನೆ ಹಿಡಿದು ಯಾವ ಕ್ಷಣವೆಂದರೆ ಆ ಕ್ಷಣ ಹೊರಟುಬಿಡುವ ಮಾಮಿ, ಒಂದು ಹೊಸ ಜೀವ ಈ ಜಗತ್ತಿಗೆ ಬರುವಾಗ ಮಾತ್ರ ಉಪಸ್ಥಿತಳಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಕಾದಂಬರಿಯೊಳಗಿನ ಇಂಥ ಎರಡು ಸಂದರ್ಭಗಳನ್ನು ನೋಡುವುದಾದರೆ, ಮೊದಲನೆಯದು, ರಾಧೆ ಹೆರುವ ಸಮಯದಲ್ಲಿನ ಮಾಮಿಯ ವಿಮುಖತೆ. ಆಗ ಹೊಸ ಜೀವವಾಗಿ ಜಗತ್ತಿಗೆ ಸರಸ್ವತಿಯ ಪ್ರವೇಶವಾಗುತ್ತದೆ. ಎರಡನೆಯದು, ಯಮುನೆಯ ಹೆರಿಗೆಯ ವೇಳೆ. ಈಗಲೂ ಮಾಮಿ ಇಲ್ಲ. ಏನೆಂದರೆ ಏನೂ ಗೊತ್ತಿಲ್ಲದ ಸರಸ್ವತಿಯೊಬ್ಬಳೇ ನಿಂತು ಹೆರಿಗೆ ಮಾಡಿಸುತ್ತಾಳೆ. ಅವಳ ಪವಾಡ ಸದೃಶ ಚಾಕಚಕ್ಯತೆಗೆ ಸ್ವತಃ ವೈದ್ಯನಾಗಿರುವ ಅಜಿತನೇ ಬೆರಗಾಗಿ ಹೋಗುತ್ತಾನೆ. ಹೆಜ್ಜೆ ಹೆಜ್ಜೆಗೂ ತನಗೆ ವಿಷ ಹಾಕಲು ಹವಣಿಸುತ್ತಿದ್ದಾರೆ ಎಂದು ಆತಂಕಗೊಳ್ಳುವ ಮಾಮಿ ಸಾವಿನ ಭಯದಲ್ಲೇ ಬದುಕುತ್ತಿದ್ದಾಳೇನೋ ಎನ್ನಿಸುತ್ತದೆ. ಅದೇ ಹೊತ್ತಿಗೆ, ತನ್ನ ಆಕಾಂಕ್ಷೆಗಳ ಸಮೀಪ ಹೋಗುವುದಕ್ಕೆ ಸಾವಿನ ದಾರಿಯೇ ಆದರೂ ಸರಿ, ಅದನ್ನು ಬಳಸುವ ಜೀವನತೀವ್ರತೆ ಸರಸ್ವತಿಯದ್ದಾಗಿದೆ. ಮಗು ಹುಟ್ಟಿದರೆ ತಾನು ಸಾಯುತ್ತೇನೆ ಎಂಬ ಭಯದಿಂದಲೇ ಅದಕ್ಕೆ ವಿಮುಖಳಾಗುವ ಮಾಮಿ, ಇತ್ತ ಹೊಸ ಜೀವವನ್ನೂ ಸ್ವಾಗತಿಸಲಾರದೆ, ಅತ್ತ ಸಾವನ್ನೂ ದಿಟ್ಟತನದಿಂದ ಎದುರಿಸಲಾಗದೆ, ವಿಲಕ್ಷಣ ಅತಂತ್ರ ಸ್ಥಿತಿಯಲ್ಲಿ ಬೇಯುತ್ತಾಳೆ. ಸತ್ತೇಹೋಗಿದ್ದಾಳೆ ಎಂದೇ ಎಲ್ಲರೂ ಭಾವಿಸುವ ಹಾಗಿರುವ ಮರಣಮುಖಿ ಭಂಗಿಯಲ್ಲಿ ಇನ್ನೂ ಸಾಯದೇ ಉಳಿದಿರುವವಳು ಅವಳು. ಮಂತ್ರದಂಡವೇನೋ ಎಂಬಂತೆ ಕಾಣಿಸುವ ಅವಳ ಕೈಯಲ್ಲಿನ ಕೋಲೂ ಅಷ್ಟೆ. ಸರಸ್ವತಿಯನ್ನು ಜೀವ ಹೋಗುವ ಹಾಗೆ ಬಡಿಯಬಲ್ಲ ಆ ಕೋಲಿಗೆ, ಕೆಟ್ಟ ಮನಸ್ಸಿನವನಾದ, ವಿಷಸರ್ಪದಂತಿರುವ ಚಿನ್ನಸ್ವಾಮಿಯನ್ನು ಬಡಿದರೂ ಅವನ ದುಷ್ಟತನವನ್ನು ದಮನಗೊಳಿಸುವ ಶಕ್ತಿಯಿಲ್ಲ. ಹೀಗೆ ಇಡೀ ಕಥೆಯೇ ಜೀವನ್ಮರಣ ಹೋರಾಟ; ಸರಸ್ವತಿ ಮತ್ತು ಮಾಮಿಯ ಮಧ್ಯದ ಸಂಘರ್ಷ.

ಇನ್ನೂ ಒಂದು ಕಾರಣಕ್ಕಾಗಿ ಮಾಮಿಗಿಂತ ಸರಸ್ವತಿ ಮುಖ್ಯಳೆನ್ನಿಸುತ್ತಾಳೆ. ಅದು ಅವಳ ಕಣ್ಣೀರಿನ ಕಾರಣ. ಈ ಕಣ್ಣೀರಿನ ಮೂಲಕವೇ ಅವಳು ನಮ್ಮ ಮನೆಯ ಹುಡುಗಿಯಂತಾಗಿಬಿಡುತ್ತಾಳೆ. ಸಂಕಟ ಮಾತ್ರವಲ್ಲ, ಪ್ರತಿಭಟನೆಯೂ ಆಗಿ ಹರಿಯುತ್ತದೆ ಅವಳ ಕಣ್ಣೀರು. ಅದು ಮನೆಯನ್ನೆಲ್ಲ ತೋಯಿಸಿ ಹರಿಯುತ್ತ, ಹಿತ್ತಿಲಿನ ಕರಿಬೇವಿನ ಮರಕ್ಕೂ ನೀರುಣಿಸುತ್ತದೆ. ಹೀಗೆ ಯಾತನೆಯ ಪ್ರವಾಹವೊಂದು ಇಲ್ಲಿ ಪ್ರವಹಿಸುತ್ತದೆ.

ಸರಸ್ವತಿ, ಮಾಮಿಯ ಹಾಗೆ ತಾನು ಮೋಹಿಸಿದ್ದವನ ನೆನಪನ್ನು ಪೆಠಾರಿಯೊಳಗೆ ಹೂತಿಟ್ಟು ಕೂತಿರುವವಳಲ್ಲ. ತಾನು ಒಲಿದವನು ಈಗ ತನ್ನವನಲ್ಲ ಎಂದು ಗೊತ್ತಿದ್ದೂ ಮತ್ತೆ ಮತ್ತೆ ಅವನೆಡೆಗೆ ತುಡಿಯುವವಳು, ಅವನಿಗೆ ಸೋಲುವವಳು. ಈ ಸೋಲಿನಲ್ಲೇ ಬದುಕಿನ ಗೆಲುವನ್ನು ಗಳಿಸಿ ನಳನಳಿಸುವವಳು. ಆದರೆ ಮಾಮಿ ಮಾತ್ರ, ಸರಸ್ವತಿಯನ್ನು ಸೋಲಿಸಬೇಕೆಂಬ ಹಠದಲ್ಲೇ ಮತ್ತೆ ಮತ್ತೆ ಹತಾಶೆಯ ಪ್ರವಾಹಕ್ಕೆ ಸಿಕ್ಕು ನಲುಗುವವಳು. ಗೆದ್ದೆನೆಂದುಕೊಂಡ ಮರುಕ್ಷಣದಲ್ಲೇ ಮತ್ತಷ್ಟು ಮುರುಟಿಹೋಗುವವಳು. ಅತ್ತ ಸರಸ್ವತಿ ತನ್ನ ಸ್ಫೋಟಕತೆಯಲ್ಲಿ, ಒಪ್ಪಿಸಿಕೊಳ್ಳುವಿಕೆಯಲ್ಲಿ, ಸ್ವೇಚ್ಛೆ ಎನ್ನಬಹುದಾದರೆ ಅಂಥ ಬಗೆಯಲ್ಲಿ ಸ್ವಪ್ನವನ್ನು ಮೀರುತ್ತ ಹೋದರೆ, ಇತ್ತ ಮಾಮಿ ತಾನೇ ತನಗೊಂದು ದುಃಸ್ವಪ್ನವಾದಳೇ?

ಕಾದಂಬರಿಯೊಳಗೆ ಹೆಂಗಸರ ಜಗತ್ತಿನ ಈ ಮುಖಾಮುಖಿ ಎಷ್ಟು ತೀವ್ರವಾಗಿದೆಯೆಂದರೆ, ದಾವಣಗೆರೆ ಮತ್ತು ಗೋವರ್ಧನರಾಯರ ಹೋಟೆಲ್ ಉದ್ಯಮದಂಥ ವ್ಯಾವಹಾರಿಕ ಪರಿಧಿ ಹಾಗೂ ಉನ್ಮಾದೀ ಕಳೆಯ ಬೃಂದಾವನ ಇವೆಲ್ಲ ಇಲ್ಲಿ ಒಂದು ನೆಪಕ್ಕಿವೆಯೇನೋ ಎನ್ನಿಸಿಬಿಡುತ್ತದೆ ಒಂದು ಹಂತದಲ್ಲಿ. ಪರಿಸ್ಥಿತಿಯ ವಿಲಕ್ಷಣ ವ್ಯೂಹದಲ್ಲಿ ಮಾಮಿಯ ಸವತಿಯಾಗಿ ರಾಧಾ ಬರುತ್ತಾಳೆ. ಯಮುನೆಯನ್ನು ನೋಡಲು ಬಂದವರು ಆಕೆಯ ತಂಗಿ ಸರಸ್ವತಿಯನ್ನು ಮೆಚ್ಚುತ್ತಾರೆ. ಸರಸ್ವತಿಯನ್ನು ಪ್ರೀತಿಸಿದ್ದವನು ಯಮುನೆಯನ್ನು ಮದುವೆಯಾಗಲು ಮುಂದಾಗುತ್ತಾನೆ. ತಂಗಿಯ ಪ್ರಿಯಕರನನ್ನು ತಾನು ಪಡೆದುಕೊಂಡೆನೆಂಬ ಗೆಲುವಿನ ಉನ್ಮಾದದಲ್ಲಿ ಯಮುನೆ ಮೆರೆಯುತ್ತಾಳೆ. ಮುಂದೆ ಅವರಿಬ್ಬರೂ ತನ್ನ ಕಣ್ತಪ್ಪಿಸಿ ಕೂಡುವುದು ತಿಳಿದು ಕುದಿಯುತ್ತಾಳೆ. ಮಾಮಿಯ ಮುಂದೆ ಸರಸ್ವತಿ ದಿಟ್ಟತನ ತೋರುತ್ತಾಳೆ. ಅವಳನ್ನು ಮಣಿಸಲು ಮಾಮಿ ಸದಾ ಹವಣಿಸುತ್ತಾಳೆ… ಹೀಗೆ ಬೃಂದಾವನದ ಅಂತರಂಗದೊಳಗೆ ನಿರಂತರ ಸ್ಫೋಟಗಳು. ಕಡೆಗೆ ಇಡೀ ಬೃಂದಾವನಕ್ಕೇ ದರಿದ್ರ ಹಿಡಿಯುತ್ತಿದೆ ಎಂಬ ಹಂತದಲ್ಲಿ, ಎದೆಯೊಳಗಿನ ದೀಪ ಆರದಂತೆ ಕಾಯಲು ಬಂದ ಒಳ್ಳೆಯ ಮನಸ್ಸಿನ ತರುಣ ವೈದ್ಯ ಅಜಿತ ಕೂಡ ಸೋತು ತನ್ನ ದಾರಿ ತಾನು ನೋಡಿಕೊಳ್ಳಬೇಕಾಗುತ್ತದೆ. ಬೃಂದಾವನದ ಅವನತಿಗೆ ದಾವಣಗೆರೆ ಸಾಕ್ಷಿಯಾಗುತ್ತದೆ.

ಇವೆಲ್ಲದರ ಮೂಲಕ ಸುರೇಂದ್ರನಾಥ್ ಅವರು ಕಟ್ಟಿಕೊಡುವ ಭವದ ಕೇಡಿನ ಕಥೆಯಲ್ಲಿ ಎರಡು ಪ್ರಧಾನವಾದ ರೂಪಕಗಳಿವೆ. ಒಂದು ಈ ಕಾದಂಬರಿಯ ಭಾಷೆ. ಇನ್ನೊಂದು ನಾಗಲಿಂಗಪುಷ್ಪದ ಘಮ. ಜೋಗಿಯವರು ಗುರುತಿಸುವ ಹಾಗೆ ಕಥೆ ಹೇಳುವುದು ಕೂಡ ಒಂದು ಪುಣ್ಯದ ಕೆಲಸ ಎಂಬಷ್ಟು ಶ್ರದ್ಧೆ ಇಲ್ಲಿ ತಾನೇ ತಾನಾಗಿ ನಡೆದಾಡಿದೆ. ಅದು ಬಸವರಾಜ ರಾಗಗಳನ್ನು ಬಿಡಿಸುತ್ತ ಸಾಗಿದ ಹಾಗೆ, ಆ ರಾಗದ ವಿಸ್ತಾರದಲ್ಲಿ ಗೋದಾವರಿ ತನ್ನನ್ನು ತಾನು ತನ್ಮಯವಾಗಿಸಿಕೊಳ್ಳುತ್ತ ಲೀನವಾಗುವ ಹಾಗೆ ಇದೆ. ಒಂದು ನಾದವನ್ನು, ಜೀವ ಸಾಧ್ಯತೆಯ ಲಯವನ್ನು ಗಳಿಸಿಕೊಳ್ಳುತ್ತ ಬೆಳೆಯುತ್ತ ಹೋಗುವ ಈ ಭಾಷೆ, ಕಥೆಗೊಂದು ಜಾನಪದ ಬೆರಗನ್ನು ಹಚ್ಚಿದೆ. ಭಾಷೆಯೇ ಒಂದು ರೂಪಕವಾಗುವ ಪರಿ ದೇವನೂರರ “ಕುಸುಮಬಾಲೆ”ಯಲ್ಲೂ ಇತ್ತು.

ಕಥೆಯಲ್ಲಿ ನಾಗಲಿಂಗಪುಷ್ಪದ ಘಮ ಕೂಡ ಅಸಾಧಾರಣ ರೂಪಕವಾಗಿ ಬಿತ್ತರಗೊಳ್ಳುತ್ತದೆ. ಭವದ ಉದ್ದೀಪನವನ್ನು ಸಾರುತ್ತ ಹರಡಿಕೊಳ್ಳುವ ನಾಗಲಿಂಗಪುಷ್ಪದ  ಘಮ ಮತ್ತು ಅದರ ನೇರಳೆ ಬೆಳಕಿಗೂ ದಾವಣಗೆರೆ ಸಾಕ್ಷಿಯಾಗುತ್ತದೆ. ಬೃಂದಾವನದೊಳಗೆ ಈ ನಾಗಲಿಂಗಪುಷ್ಪದ ಘಮ ಮೊದಲು ಅಡರಿಕೊಂಡದ್ದು ಮಾಮಿ ಮತ್ತು ಗೊವರ್ಧನರಾಯರ ಮೈಗಳು ಬೆಸೆದುಕೊಳ್ಳುತ್ತ, ಸೃಷ್ಟಿಗೆ ಅಣಿಯಾಗುವ ಮುನ್ನವೇ ಬೇರೆಯಾದ ದಿನ. ಎರಡನೇ ಬಾರಿಗೆ, ಗೋವರ್ಧನರಾಯರು ಮತ್ತು ರಾಧಾ ಸುಖದ ನಿಮಿಷಗಳನ್ನು ಉಣ್ಣತೊಡಗಿದಾಗ. ಅನಂತರವೆಲ್ಲ ನಾಗಲಿಂಗಪುಷ್ಪದ ಗಂಧಕ್ಕೆ ಕಾರಣವಾದದ್ದು ಸರಸ್ವತಿಯ ದೈಹಿಕ ತಹತಹ.

ರಾಧೆಯ ಸಾವಿನ ಬೆನ್ನಲ್ಲೇ, ಅವಳು ಆಸೆಪಟ್ಟು ಬೆಳೆದಿದ್ದ ನಾಗಲಿಂಗಪುಷ್ಪದ ಎರಡು ಗಿಡಗಳನ್ನು ಮಾಮಿ ಬೇರುಸಹಿತ ಕೀಳಿಸಿಹಾಕುತ್ತಾಳೆ. ಮುಂದೆ ಸರಸ್ವತಿಯ ಕಾರಣದಿಂದಾಗಿ ನಾಗಲಿಂಗಪುಷ್ಪದ ಘಮ ಮೂಡತೊಡಗಿದಾಗಲೂ ಎಲ್ಲಾದರೂ ನಾಗಲಿಂಗಪುಷ್ಪದ ಕುಡಿ ಉಳಿದುಕೊಂಡಿದೆಯೇ ಎಂದು ಹುಡುಕುತ್ತಾಳೆ. ಆದರೆ ಅವಳೆಷ್ಟು ಹುಡುಕಿದರೂ ನಾಗಲಿಂಗಪುಷ್ಪದ ಕುಡಿ ಮಾತ್ರ ಅವಳ ಕಣ್ತಪ್ಪಿಸಿ ಉಳಿದುಕೊಂಡೇಬಿಡುತ್ತದೆ. ಕಡೆಯವರೆಗೂ, ಅವಳು ಸೊಂಟ ಮುರಿದುಕೊಂಡು ಬಿದ್ದು ಅಸಹಾಯಕತೆಯಲ್ಲಿ ಕೂಗಿಕೊಳ್ಳುವ ಸ್ಥಿತಿಯಲ್ಲೂ ನಾಗಲಿಂಗಪುಷ್ಪ ಅವಳ ಪಾಲಿಗೊಂದು ನಿವಾರಿಸಿಕೊಳ್ಳಲಾಗದ ವೈರಿಯಂತೆ ಕಾಡುತ್ತದೆ; ನಿನಗೆ ಸಿಗಲಾರೆ ಎಂಬಂತೆ ಅವಳನ್ನು ಇನ್ನಷ್ಟು ಅಸಹಾಯಕತೆಯ ಕುದಿಯಲ್ಲಿ ಬೇಯಿಸಿಬಿಡುತ್ತದೆ. ಮಾಮಿಗೆ ಸವಾಲಾಗಿಯೇ ಉಳಿದುಹೋದ ಸರಸ್ವತಿಯ ಹಾಗೆ.

ಸಂಘರ್ಷ ಪರಂಪರೆಯ ಭವದಲ್ಲಿ ಗೆದ್ದದ್ದು ನಾಗಲಿಂಗಪುಷ್ಪದ ಘಮವೇ?

ಎಲ್ಲ ಗದ್ದಲದ ಆಚೆಗೂ…

Posted ನವೆಂಬರ್ 17, 2007 by bookbazaar
ವರ್ಗಗಳು: ಫ್ರೆಷ್ ಪೇಜಸ್

ಉಫೀಟ್…!
ಲೇ: ಚೇತನಾ ತೀರ್ಥಹಳ್ಳಿ
ಪ್ರ: ಇಬ್ಬನಿ ಭಾವಬಿಂದು, ೩೬೩೪, ೪ನೇ ಕ್ರಾಸ್, ಕೌಂಡಿನ್ಯ ಮೆಡಿಕಲ್ಸ್ ಸಮೀಪ, ಗಾಯತ್ರಿ ನಗರ, ಬೆಂಗಳೂರು-೨೧
ಬೆಲೆ: ೨೦ ರೂ. ಪುಟಗಳು: ೪೪

chetana_coverone5.jpg

* * *

ಚೇತನಾ ತೀರ್ಥಹಳ್ಳಿ ನನಗೆ ಪರಿಚಯವಿರುವುದು “ಪುರುಷಾಕಾರ”ವನ್ನು ಬೆಚ್ಚಿಸಬಲ್ಲ ಅವರ ಬರಹಗಳ ಮೂಲಕ. ಪುಟ್ಟ ಪುಟ್ಟ ಬರಹಗಳು ಅವು. ಕಾವ್ಯದ ಶಕ್ತಿಯೊಂದಿಗೆ ಕೆಲವೇ ಮಾತುಗಳಲ್ಲಿ ಮಾರ್ಮಿಕವಾಗಿ, ಆದರೆ ಬಲು ನಿರಾಯಾಸವಾಗಿ, ಹೇಳಬೇಕಾದ್ದನ್ನು ಹೇಳಿ ಮುಗಿಸಬಲ್ಲ ಸಹಜವಂತಿಕೆಯಿಂದ ಅವರ ಬರಹಗಳು ಗಮನ ಸೆಳೆಯುತ್ತವೆ. ಅವರು ಕವಿತೆಯನ್ನೂ ಬರೆಯುತ್ತಾರೆ ಎಂಬುದು ಗೊತ್ತಾದದ್ದೇ ಮೊನ್ನೆ.

ಅಳಲು, ಸಿಟ್ಟು ಮತ್ತು ಪ್ರತಿಭಟನೆಯನ್ನು ಹಾಹಾಗೇ ವ್ಯಕ್ತಪಡಿಸುವ ಯಾವುದೇ ಮನೆಯ ಹುಡುಗಿಯ ಹಾಗೆ ಚೇತನಾ ಅವರ ಅಭಿವ್ಯಕ್ತಿ. ಹಾಗಾಗಿಯೇ ಚೇತನಾ ಎಷ್ಟೋ ಸಲ ಗೋಳು ಮತ್ತು ಗೋಜಲುಗಳ ಕಥೆಗಳಲ್ಲಿ ಮುಳುಗಿಹೋಗಿದ್ದಾರೆ ಎನ್ನಿಸಿದರೂ, ಅವರು ಹೇಳುತ್ತಿರುವುದು ಮಾತ್ರ ಹಲವು ಹುಡುಗಿಯರ ಕಥೆಯನ್ನು ಎಂಬುದೂ ನಿಚ್ಚಳ. ವೈಯಕ್ತಕ ಸಂಕಟಗಳ ಕತ್ತಲ ಕೋಣೆಯ ಬಾಗಿಲಿಂದಾಚೆಯೂ ನಿರುಕಿಸುವ ಧ್ಯಾನ ಅವರದು. ಅದರಿಂದ, ಒಂದಿಡೀ ಸಮುದಾಯದ ಆತ್ಮಕಥನವಾಗಲು ತವಕಿಸುವ ಮಿಂಚಿನ ಧಾರೆಗಳು ಕೂಡ ಅವರ ಬರಹಗಳಲ್ಲಿ ಗೋಚರವಾಗುತ್ತವೆ.

*

“ಹನ್ನೆರಡು ಮನೆ
ಕುಂಟೋಬಿಲ್ಲೆಯ ಹುಡುಗಿ
ಹಿತ್ತಿಲಲ್ಲಿ ಕುಂಟುತ್ತಿದ್ದಾಳೆ,
ಆಟ ಸೋತಿದ್ದಾಳೆ.”

ಇಲ್ಲಿನ ಬಹುಪಾಲು ಕವಿತೆಗಳಲ್ಲಿ ಇರುವವರು ಹೀಗೆ “ಆಟ ಸೋತ” ಹುಡುಗಿಯರು. “ಬಲಗಾಲಿಟ್ಟು ಶುರುವಾಗುವ ಆಟ”ದಲ್ಲಿ ಸೋತವರು. ಇವರದೆಲ್ಲ “ನೋವುಗಳ ಬಗೆಬಗೆದು ಹೊರಗೆಳೆದು ಅಳು”ವ ಸ್ಥಿತಿ. ಹಾಗಿದ್ದೂ ಬೇರೆಯವರ ಅನುಕಂಪದ ನೋಟ ಇವರನ್ನು ಸಂತೈಸುವುದಿಲ್ಲ; ಬದಲಾಗಿ ಇನ್ನಷ್ಟು ತಲ್ಲಣಗೊಳಿಸುತ್ತದೆ. ನಿರ್ದಯಿ ಲೋಕದಲ್ಲಿ ನಗುವಾಗಿ ಅವತರಿಸುವ ಶಕ್ತಿವಂತೆಯರು ಇವರು.

“ಎಷ್ಟು ದಿನಗಳಾಗಿ ಹೋಗಿವೆ
ನನ್ನ ನೆರಳು ನೋಡಿ ನಾನು!”

ಹೆಣ್ಣೊಬ್ಬಳ “ಗೃಹಬಂಧನ” ಅವಸ್ಥೆಯನ್ನು ನಿರೂಪಿಸುವುದಕ್ಕೆ ಇದಕ್ಕಿಂತ ಬೇರೆ ಸಾಲುಗಳು ಬೇಕಿಲ್ಲವೇನೊ. ಒಂದು ನಿರೀಕ್ಷೆಯಿಂದ, ಸುಂದರ ಕನಸಿನಿಂದ ಶುರುವಾಗುವ ಬಾಳು ಯಾವ ಹಂತಕ್ಕೆ ಮುಟ್ಟಿದೆಯೆಂದರೆ, ಈಗ ಸೂರ್ಯನ ಮುಖ ನೋಡದೆ ದಿನಗಳು ಹುಟ್ಟುವುದು, ಮುಗಿದುಹೋಗುವುದು ಅಭ್ಯಾಸವೇ ಆಗಿಹೋಗಿದೆ.

ಇಂಥ ಹಲವು ಕಥನಗಳನ್ನು ಚೇತನಾ ಕವಿತೆಗಳು ನುಡಿಸುತ್ತವೆ. ಹಲವು ದಿಗ್ಭ್ರಮೆಗಳ ಮೊತ್ತವನ್ನು ಗಂಟು ಕಟ್ಟಿಕೊಂಡು ಸಾಗಿರುವ ಹುಡುಗಿಯರ ದನಿಯನ್ನು ಇವರ ಕವಿತೆಗಳ ತೀರದಲ್ಲಿ ಕೇಳಿಸಿಕೊಳ್ಳಬಹುದಾಗಿದೆ.

ನನಗೆ ತುಂಬ ಇಷ್ಟವಾದ ಚೇತನಾ ಅವರ ಮತ್ತೊಂದು ಕವಿತೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಈ ಕವಿತೆಯಲ್ಲಿ ಅವರು, ಸಮಾಜದ ಪುರುಷ ಪ್ರಧಾನ ಧೋರಣೆಯನ್ನು ಅಣಕಿಸುವ ಬಗೆ ಬಲು ಸೂಕ್ಷ್ಮವಾಗಿದೆ. ಮಹಾದೇವಿ ಅಕ್ಕ ಆದದ್ದು, ಮೀರಾ ಸಂತಳೆನಿಸಿದ್ದು ನಿಜವಾಗಿಯೂ ಹೇಗೆ ಎಂಬ ಪ್ರಶ್ನೆಗಳನ್ನು ಈ ಕವಿತೆ ಉತ್ತರಿಸುತ್ತದೆ. ಅವರಿಬ್ಬರೂ ಕ್ರಮವಾಗಿ “ಕಲ್ಲು” ಚೆನ್ನಮಲ್ಲಿಕಾರ್ಜುನನನ್ನು, “ಗೊಂಬೆ” ಮಾಧವನನ್ನು ಗಂಡನೆಂದು ಬಗೆದರು. ಆದರೆ ಅವರ ಹಾಗೆಯೇ ಗಂಡನ್ನ ಬಿಟ್ಟು ಮತ್ತಾರನ್ನೋ ಗಂಡನೆಂದು ಬಗೆದ ಹೊಸ ಸಮಾಜದ ಹೆಣ್ಣುಮಗಳೊಬ್ಬಳು ಪಡೆದದ್ದು ಹಾದರಗಿತ್ತಿಯ ಪಟ್ಟ. ಯಾಕೆಂದರೆ, ಅವಳು ಗಂಡನೆಂದು ಧೇನಿಸಿದ್ದು ಕಲ್ಲನ್ನೊ, ಗೊಂಬೆಯನ್ನೊ ಆಗಿರಲಿಲ್ಲ; “ಸಜೀವ ಗಂಡಸಾಗಿದ್ದ!”

ಇದನ್ನು ಇನ್ನೂ ವಿವರಿಸುವುದು ಬೇಕಿಲ್ಲ. ಅಲ್ಲದೆ ಇದಕ್ಕಿಂತ ಹೆಚ್ಚಾಗಿ ನಾನಿಲ್ಲಿ ಚೇತನಾ ಅವರ ಕವಿತೆಗಳ ಭಾಗಗಳನ್ನು ಉದ್ಧರಿಸುವುದಕ್ಕೂ ಬಯಸುವುದಿಲ್ಲ. ಹೇಳಿಕೊಳ್ಳುವ, ಹೇಳುವ ತೀವ್ರತೆ ಅವರೊಳಗೆ ಗಾಢವಾಗಿದೆ ಎಂಬುದಷ್ಟೇ ಮುಖ್ಯವಾಗಿ ಕಂಡಿದೆ. ಈ ತೀವ್ರತೆಯೇ ಅವರನ್ನು ಮುನ್ನಡೆಸಬಲ್ಲುದು.

ವೆಂಕಟ್ರಮಣ ಗೌಡ 
(ಮುನ್ನುಡಿಯಿಂದ)

“ಕೇಳು ಪುಸ್ತಕ”ವ ಕೇಳಲು ಬನ್ನಿ

Posted ನವೆಂಬರ್ 13, 2007 by bookbazaar
ವರ್ಗಗಳು: ಕಲರವ

kelu_inv.jpg

ಚೆಲುವು ಮತ್ತು ಗೋವಿನ ಹಿಂದಿನ ಚಾರಿತ್ರಿಕ ನೋವು

Posted ನವೆಂಬರ್ 10, 2007 by bookbazaar
ವರ್ಗಗಳು: ಅಮೃತಕ್ಕೆ ಗರುಡ

ಶಾಲಭಂಜಿಕೆ
ಲೇ: ಡಾ. ಕೆ ಎನ್ ಗಣೇಶಯ್ಯ
ಪ್ರ: ಛಂದ ಪುಸ್ತಕ, ಬೆಂಗಳೂರು
ಬೆಲೆ: ೬೦ ರೂ. ಪುಟಗಳು: ೧೩೨

 bk1.gif

 *

ಸರಯೂ ಚೈತನ್ಯ

ವಿಜ್ಞಾನಿಯೊಬ್ಬ ಚರಿತ್ರೆಯ ಕಾಡೊಳಗೆ ಸುತ್ತುತ್ತಾ, ಶಿಲೆಗಳ ಮನಸ್ಸು ಮುಟ್ಟುತ್ತಾ ಹೇಳಿದ ಕಥೆಗಳಿವೆ ಇಲ್ಲಿ. ಆದರೆ, ವಿಜ್ಞಾನಿಯೊಬ್ಬ ಕಥೆಯೆಂಬುದನ್ನು ಥ್ರಿಲ್ಲರ್ ಎಂದಷ್ಟೇ ಭಾವಿಸಿಬಿಡುವಲ್ಲಿನ (ಲೇಖಕ ಈ ಕಥೆಗಳನ್ನು ಕರೆದಿರುವುದೇ ಥ್ರಿಲ್ಲರ್ ಗಳು ಎಂದು) ಮಿತಿಗಳು ಅಥವಾ ಅಪಾಯಗಳೂ ಈ ಕಥೆಗಳನ್ನು ಅಲ್ಲಲ್ಲಿ ಭಗ್ನಗೊಳಿಸಿವೆ.

ಒಬ್ಬ ವಿಜ್ಞಾನಿಯಾಗಿ ಡಾ. ಕೆ ಎನ್ ಗಣೇಶಯ್ಯ ಅವರು ಹೊಂದಿರುವ ಕುತೂಹಲವೇ ಈ ಕಥೆಗಳ ಕಾಲುದಾರಿ. ಆ ದಾರಿಯಲ್ಲಿ ಸಾಗುತ್ತಾ ಅವರು ಜೀವಪರಿಸರದ ಕಡೆಗೆ ಮಾತ್ರವಲ್ಲದೆ, ಕಾಲದ ಪದರಿನಲ್ಲಿ ಹೂತುಹೋಗಿರುವ ಚರಿತ್ರೆಯ ಅವಶೇಷಗಳತ್ತಲೂ ಕಣ್ಣುಹಾಯಿಸುತ್ತಾರೆ. ಅದಕ್ಕೊಂದು ವೈಜ್ಞಾನಿಕ, ತಾರ್ಕಿಕ ಚೌಕಟ್ಟು ಕೊಡಲು ನೋಡುತ್ತಾರೆ. ಮರೆತ ಪುಟಗಳನ್ನು ಬೆಳಕಿಗೆ ಹಿಡಿಯುವ ಪ್ರಯತ್ನದಲ್ಲಿ ಈ ಕಥೆಗಳು ಬೆಳಗುತ್ತವೆ. ಆದರೆ ಈ ಕಥೆಗಳ ಸಮಸ್ಯೆಯಿರುವುದು, ನಿಗೂಢತೆಯ ಸ್ಪರ್ಶ ಕೊಡಬೇಕು ಎಂದು ಕಥೆಗಾರ ಆಸೆಪಡುವಲ್ಲಿ.

ಮೊದಲ ಕಥೆ “ಶಾಲಭಂಜಿಕೆ”ಯನ್ನೇ ತೆಗೆದುಕೊಳ್ಳೋಣ. ಹತ್ತು ವರ್ಷಕ್ಕೂ ಹೆಚ್ಚು ಕಾಲ ಹೆಂಡತಿಯನ್ನೂ ಮರೆತು ರಾಜ್ಯ ವಿಸ್ತಾರದ ಮೋಹದಲ್ಲಿ ಹೊರಟ ರಾಜನೊಬ್ಬ ಎದುರಿಸುವ ವ್ಯಂಗ್ಯವನ್ನು ಹೇಳುವ ಕಥೆ ಇದು. ಅಕಸ್ಮಾತ್ತಾಗಿ ಸುಂದರ ಕನ್ಯೆಯೊಬ್ಬಳ ವಿಗ್ರಹ ಕಂಡಾಗ ಅದರ ರೂಪದರ್ಶಿಯ ಬಗ್ಗೆ ಆತನಿಗೆ ಕುತೂಹಲವಾಗುತ್ತದೆ. ಅವಳು ಸಿಕ್ಕರೆ ತನ್ನವಳನ್ನಾಗಿ ಮಾಡಿಕೊಳ್ಳಬಹುದು ಎಂಬ ಲಂಪಟತನ ಹೆಡೆಯೆತ್ತುತ್ತದೆ. ಅದರ ಮೂಲ ಹುಡುಕಿಹೊರಟಾಗ ತನ್ನ ರಾಣಿಯೇ ಆ ರೂಪದರ್ಶಿ ಎಂಬುದು ತಿಳಿಯುತ್ತದೆ. ತನ್ನ ರಾಜ್ಯ ವಿಸ್ತಾರದ ಮೋಹವೇ ಅವನೆದುರು ಎಂದೆಂದೂ ಗೆಲ್ಲಲಾಗದ ವ್ಯಂಗ್ಯವಾಗಿ ನಿಲ್ಲುತ್ತದೆ. ಇನ್ನೊಂದು ಕಡೆಯಿಂದ, ಒಂದು ಹೆಣ್ಣಿನ ತಳಮಳವನ್ನು ಅಲಕ್ಷಿಸಿಬಿಡುವವರ ಚರಿತ್ರೆಯ ದಾಖಲಾತಿಯೂ ಆಗುತ್ತದೆ. ಆದರೆ ಇಂಥ ಕಥೆಗೆ ಲೇಖಕ ತರುವ ಕೊನೆ ಮಾತ್ರ ಹಾಸ್ಯಾಸ್ಪದ ಎನ್ನಿಸುವಂತಿದೆ. ಪ್ರಯಾಣದಲ್ಲಿ ತನಗೆ ಆ ಕಥೆ ಹೇಳಿದ ವ್ಯಕ್ತಿ ನಿಜವಾಗಿಯೂ ಆ ಟ್ರೈನಿನಲ್ಲಿದ್ದ ವ್ಯಕ್ತಿಯಾಗಿರಲೇ ಇಲ್ಲ, ಆ ಬರ್ಥ್ ನಲ್ಲಿ ಯಾರೂ ಟಿಕೆಟ್ ಪಡೆದು ಪ್ರಯಾಣಿಸಿರಲೇ ಇಲ್ಲ ಎಂದು ಅಚ್ಚರಿಯನ್ನು ಲೇಪಿಸಲು ನಿರೂಪಕ ಯತ್ನಿಸುತ್ತಾನೆ. ಚರಿತ್ರೆಯ ವಿವರಗಳ ನೆರವಿನಿಂದಲೇ ಒಂದು ಗಾಢವಾದ ಅನುಭವವನ್ನು ಉಳಿಸಬಹುದಾಗಿದ್ದ ಈ ಕಥೆಯನ್ನು ಇಂಥ ಥ್ರಿಲ್ಲೊಂದರ ಆಸೆಗೆ ಬೀಳಿಸಬೇಕಿತ್ತೇ?

ಇಂಥ ಮತ್ತೊಂದು ಕಥೆ “ಪಿರಮಿಡ್ಡಿನ ಗರ್ಭದಲ್ಲಿ”. ಇಲ್ಲಿ ಕೂಡ ರಾಜಕುಟುಂಬವೊಂದರ ಹುಳುಕುಗಳನ್ನು ಕಾಣಿಸಲಾಗಿದೆ. ಆದರೆ ಕಥೆ ಹೇಳಿದ ವೈದ್ಯನನ್ನು ನಿಗೂಢತೆಯ ತೆರೆಯ ಹಿಂದೆ ಇಡುವುದು ಅನವಶ್ಯಕವಾಗಿತ್ತು ಎಂದೇ ಅನ್ನಿಸುತ್ತದೆ. ಸ್ವಲ್ಪ ಸೂಕ್ಷ್ಮ ಕುಶಲತೆ ತೋರಿಸಿದ್ದರೆ, ಈ ಕಥೆಯ ವೈದ್ಯನನ್ನು, “ಶಾಲಭಂಜಿಕೆ”ಯ ಕಥೆ ಹೇಳುವ ವ್ಯಕ್ತಿಯ ಪಾತ್ರಗಳನ್ನು ಚರಿತ್ರೆ ಮತ್ತು ವರ್ತಮಾನವನ್ನು ಬೆಸೆಯುವ ಕೊಂಡಿಗಳಂತೆ ತೋರಿಸುವುದು ಸಾಧ್ಯವಿತ್ತು. “ಶಿಲಾವ್ಯೂಹ” ಎಂಬ ಕಥೆಯಲ್ಲಿ ಇದು ಕೊಂಚ ಮಟ್ಟಿಗೆ ಸಾಧ್ಯವಾದಂತಿದೆ. ಆ ಸಾಧ್ಯತೆಯಿಂದ ಈ ಎರಡೂ ಕಥೆಗಳು ತಪ್ಪಿಸಿಕೊಂಡಿವೆ.

ಇವುಗಳ ನಡುವೆ, “ಎದೆಯಾಳದಿಂದೆದ್ದ ಗೋವು” ನಿಜಕ್ಕೂ ಎದೆಗಿಳಿಯುವ ಕಥೆ. ಸೋಮನಾಥಪುರದ ಎಲ್ಲ ಗಂಡುಶಿಲ್ಪಗಳ ಎದೆಯಲ್ಲೂ ಸೂಕ್ಷ್ಮವಾಗಿ ಅವಲೋಕಿಸಿದರೆ ಬಸವನ ಮುಖ ಕಾಣುವುದರ ಹಿಂದಿನ ರಹಸ್ಯದ ಬಗ್ಗೆ ಇರುವ ಕಥೆ ಇದು. ಇವುಗಳ ಶಿಲ್ಪಿ ಮೂಲತಃ ಗೊಲ್ಲರವನಾಗಿದ್ದು, ಶಿಲ್ಪಿಯ ಮಗನಾಗಿ ಬೆಳೆಯುತ್ತಾನೆ. ತನ್ನ ನಿಜವಾದ ತಾಯಿಯ ಬಗ್ಗೆ ತಿಳಿದಾಗ ಅವನೊಳಗೆ ಕೋಲಾಹಲವೇ ಉಂಟಾಗುತ್ತದೆ. ಅವನೆದೆಯೊಳಗಿನ ನೋವೇ ಅವನ ಪ್ರತಿ ಶಿಲ್ಪದಲ್ಲೂ ಹೀಗೆ ಎದೆಯಾಳದಿಂದೆದ್ದ ಗೋವಾಗುತ್ತದೆ. ತನ್ನ ಆ ಕಲೆಗಾರ ಮಗನ ಬಗ್ಗೆ ಆತನ ನಿಜವಾದ ತಾಯಿ ಇಟ್ಟುಕೊಂಡಿರುವ ಅಭಿಮಾನವನ್ನು ದಾಖಲಿಸುವ ವಿವರಗಳೂ ಕಥೆಯಲ್ಲಿ ಬರುತ್ತವೆ. ಹೀಗೆ ಈ ಕಥೆ ತಂತಾನೇ ಒಂದು ರೂಪಕವಾಗುತ್ತದೆ. ಕಥೆಯನ್ನು ಓದಿ ಮುಗಿಸಿದಾಗ, ಕಲೆಯ ಬೆರಗಿನ ಮುಂದೆ ವಿಜ್ಞಾನದ ಮನಸ್ಸು ಮಂಡಿಯೂರಿದಂತೆ ಕಾಣಿಸುತ್ತದೆ.

ಈ ಸಂಕಲನದ “ನಂಜಾದ ಮಧು”, “ಹುಲಿಯ ಮಡಿಲ ಹುಳು” ಮತ್ತು “ಪರಾಗತ್ಯಾಗ” ವಿಜ್ಞಾನ ಲೋಕದಲ್ಲಿನ ಭ್ರಷ್ಟತೆಯ ಕಡೆ ಗಮನ ಸೆಳೆಯುತ್ತವೆ. ವಿಜ್ಞಾನ ಭ್ರಷ್ಟರು ಮತ್ತು ಉಗ್ರರ ಕೈಗೆ ಸಿಕ್ಕರೆ ಎಂಥ ಅನಾಹುತಗಳಾದಾವು ಎಂಬುದನ್ನು ಯಾರೂ ಊಹಿಸಬಹುದು. ಅವರ ವಿರುದ್ಧ ಗೆಲ್ಲಬೇಕು ಎಂಬುದೂ ಸಹಜ. ಆದರೆ ಇವತ್ತಿನ ವೈಭವೀಕೃತ ಹೀರೋನ ಚಿತ್ರವನ್ನೇ ಉಳ್ಳಂಥ ಸಿನೆಮಾ ಶೈಲಿಯ ಕಥೆ ಹೇಳಲು ಗಣೇಶಯ್ಯ ಅವರಂಥವರು ತಮ್ಮ ಶಕ್ತಿ ವ್ಯಯಿಸಬೇಕೇ? ವಿಜ್ಞಾನ ಲೋಕದ ಅಗೋಚರ ಅಪಚಾರಗಳು ಹಾಗೂ ಅವುಗಳ ಕಾರಣದಿಂದಾಗಿ ಎದುರಾಗಬಹುದಾದ ಸವಾಲುಗಳು ಅಷ್ಟು ಸರಳವಾಗಿ ನಿಭಾಯಿಸುವಂಥವಾ? ಹಾಗೆಂದು ಗಣೇಶಯ್ಯನವರೂ ಒಪ್ಪುತ್ತಾರಾ? ಈ ಕಥೆಗಳ ಇನ್ನೊಂದು ಆಯಾಮವನ್ನು ಯೋಚಿಸಬಹುದಾಗಿದೆ ಎಂಬ ಕಾರಣಕ್ಕಾಗಿ ಈ ಪ್ರಶ್ನೆಗಳು. ಮತ್ತು, ಗಣೇಶಯ್ಯ ಅವರು ಇಂಥ ಸಾಧಾರಣ ಶೈಲಿಯ ಕಥೆಗಳಿಗೂ ಆಚೆ ಕೈಚಾಚಬಲ್ಲ ತಾಕತ್ತನ್ನುಳ್ಳವರು ಎಂದು ಕಂಡಿರುವುದರಿಂದಲೇ ಈ ಪ್ರಶ್ನೆಗಳು ಹೆಚ್ಚು ಅಗತ್ಯವೆಂದು ತೋರುತ್ತದೆ.

ಇದೇನೇ ಇದ್ದರೂ, “ಶಾಲಭಂಜಿಕೆ”ಯೆಂಬ  ಚೆಲುವಿನ ಹಿನ್ನೆಲೆಯಲ್ಲಿರುವ ಈ ಬದುಕಿನ ವೇದನೆಯನ್ನು ಕಂಡ ಕಥೆಗಾರ ಇಷ್ಟವಾಗುತ್ತಾನೆ. ಒಂದು ಕಾಲದ, ಒಂದು ಸಮಾಜದ, ಒಂದು ಜೀವದ ವೇದನೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅಂಥವರ ಮನಸ್ಸಿಗೆ ಮಾತ್ರ ಚರಿತ್ರೆ ನಾಟೀತು. ಅಂಥ ಮನಸ್ಸಿನವರು ತಾವೇ ಚರಿತ್ರೆಯ ತೀರಕ್ಕೆ ನಡೆದುಹೋಗುತ್ತಾರೆ ಕೂಡ. ಹಾಗಲ್ಲದವರ ವರ್ತಮಾನದೊಳಕ್ಕೆ ಚರಿತ್ರೆಯನ್ನು ಒಯ್ಯುವುದೆಂದರೆ, ಅದು ಚರಿತ್ರೆಯ ಕತ್ತು ಹಿಸುಕುವ ಕೆಲಸವಷ್ಟೇ ಆದೀತು. ಆದ್ದರಿಂದಲೇ ಚರಿತ್ರೆಯನ್ನು ಓದಿಸಲು “ಥ್ರಿಲ್ಲರ್” ಎಂಬ ಹಣೆಪಟ್ಟಿಯ ಹಂಗು ಖಂಡಿತ ಬೇಡ ಎಂದು ಹೇಳಬೇಕೆನ್ನಿಸುತ್ತದೆ.

ಅವಧಿಯ ನೋಡಿದಿರಾ…?

Posted ನವೆಂಬರ್ 10, 2007 by bookbazaar
ವರ್ಗಗಳು: ಯಾರಿಟ್ಟರೀ ಚುಕ್ಕಿ?

avadhi-card.jpg

ಬೇರೆಯೇ ಇವೆ ಬಂಡಾಯದ ಕಾರಣಗಳು!

Posted ನವೆಂಬರ್ 9, 2007 by bookbazaar
ವರ್ಗಗಳು: ಫ್ರೆಷ್ ಪೇಜಸ್

೧೮೫೭ರ ಬಂಡಾಯ
ಪ್ರ: ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ ವಾದಿ)
ಕೋಲಾರ ಜಿಲ್ಲಾ ಸಮಿತಿ, ಕೋಲಾರ
ಬೆಲೆ: ೨೦ ರೂ. ಪುಟಗಳು: ೬೪

1857.jpg

ಬ್ರಿಟಿಷರ ಅಡಿಯಲ್ಲಿದ್ದ ಭಾರತದ ಸಿಪಾಯಿಗಳು ನಡೆಸಿದ ೧೮೫೭ರ ಬಂಡಾಯಕ್ಕೆ ಬಂದೂಕಿನ ಕಾಡತೂಸಿಗೆ ಬಳಸಿದ ಹಂದಿ ಮತ್ತು ದನದ ಕೊಬ್ಬನ್ನು ಕಚ್ಚಿ ತೆಗೆಯಬೇಕಾದ ಪರಿಸ್ಥಿತಿ ಕಾರಣವೆಂಬಂತೆ ಹಲವೆಡೆ ಬಿಂಬಿಸಲಾಗಿತ್ತು. ಆದರೆ ಈ ಪುಸ್ತಕದಲ್ಲಿನ ವಿವಿಧ ತಜ್ಞರ ಲೇಖನಗಳಿಂದ ತಿಳಿದುಬರುವ ಪ್ರಮುಖ ಅಂಶವೇನೆಂದರೆ, ಅಂದಿನ ಸಾಮಾಜಿಕ ಪರಿಸ್ಥಿತಿ, ಬ್ರಿಟಿಷರು ೧೮೩೯ರಿಂದ ೧೮೫೭ರವರೆಗೆ ವಿವಿಧ ದೇಶಗಳಲ್ಲಿ ನಡೆಸಿದ ೧೦ ಯುದ್ಧಗಳಲ್ಲಿ ಭಾರತೀಯ ಸೈನಿಕರ ಬಳಕೆ ಮತ್ತು ವಿಪರೀತ ಸಾವು, ನೋವುಗಳು, ಕೆಲವು ದಲ್ಲಾಳಿ ಜಮೀನ್ದಾರರಿಗೆ ರಿಯಾಯ್ತಿ ನೀಡಿ, ಸಾಮಾನ್ಯ ರೈತರಿಗೆ ವಿಧಿಸಿದ ವಿಪರೀತ ತೆರಿಗೆ ಮತ್ತು ಗೇಣಿ, ದೇಶೀಯ ರಾಜರುಗಳನ್ನು ಕುತಂತ್ರದಿಂದ ಸೋಲಿಸಿ ಸಂಸ್ಥಾನಗಳನ್ನು ಕಬಳಿಸುವುದು ಇಂತಹ ಹತ್ತಾರು ಕಾರಣಗಳು ಬಂಡಾಯಕ್ಕೆ ನಾಂದಿ ಹಾಡಿವೆ. ಅಂದು ಆಧುನಿಕ ರಾಷ್ಟ್ರ್‍ಈಯತೆಯ ಕಲ್ಪನೆ ಇರದಿದ್ದರೂ, ಬ್ರಿಟಿಷರ ವಿರುದ್ಧ ನಾವೆಲ್ಲಾ ಒಂದಾಗಬೇಕೆಂದು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಮತ್ತಿತರ ಧರ್ಮಗಳ ಜನರ ಐಕ್ಯತೆಯನ್ನು ಸಾರಿದ ಸಮರವದು.

(ಪ್ರಸ್ತಾವನೆಯಿಂದ)

ಬೌದ್ಧಿಕ ಸಿದ್ಧಮಾದರಿಗಳ ನಿರಾಕರಣೆ

Posted ನವೆಂಬರ್ 9, 2007 by bookbazaar
ವರ್ಗಗಳು: ಫ್ರೆಷ್ ಪೇಜಸ್

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು
ಸಂ: ವಿನಯ್ ಲಾಲ್, ಅಶೀಶ್ ನಂದಿ
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-೫೭೭೪೧೭
ಬೆಲೆ: ೧೬೦ ರೂ. ಪುಟಗಳು: ೨೮೦

*

ದು ಪರಿಭಾಷೆಗಳ ಪರಿಚಯವಿಲ್ಲದವರಿಗೆ ತಾಂತ್ರಿಕ ಪದಪ್ರಯೋಗಗಳ ಹಿನ್ನೆಲೆಯನ್ನು ಅರ್ಥ ಮಾಡಿಸುವ ಪ್ರಯತ್ನ ಅಲ್ಲ; ಅದಕ್ಕಿಂತ ಘನವಾದೊಂದು ಉದ್ದಿಶ್ಯ ಈ ಕೋಶದ ಹಿಂದಿದೆ. ಒಂದು ಕಡೆಯಿಂದ, ಈ ಕೋಶವು ನಮ್ಮ ಕಾಲ-ದೇಶಗಳ ಕೆಲವು ಮುಖ್ಯ ಪದ-ಪದಾರ್ಥ-ಪರಿಕಲ್ಪನೆ-ಪ್ರಕ್ರಿಯೆಗಳ ಕಥೆಯನ್ನು ಹೇಳುತ್ತಲೇ ಜತೆಜತೆಗೇ, ಅವುಗಳ ಹಿಂದಿನ ಸೂಕ್ಷ್ಮ ಸಾಂಸ್ಕೃತಿಕ ರಾಜಕಾರಣವನ್ನು ಅನಾವರಣಗೊಳಿಸುತ್ತದೆ. ಮತ್ತು ಆ ಮೂಲಕ ಅರ್ಥಕಾರಣ, ಜ್ಞಾನಕಾರಣಗಳ ವಿವಿಧ ಅಪರಿಚಿತ ಆಯಾಮಗಳನ್ನು ಕುರಿತಂತೆ ಅಸಾಧಾರಣವಾದ ಒಳನೋಟಗಳನ್ನು ನೀಡುತ್ತದೆ ಕೂಡ. ಆದ್ದರಿಂದಲೇ ವಿಷಯದಲ್ಲಿ ತುಂಬ ವೈವಿಧ್ಯವನ್ನೊಳಗೊಂಡಿರುವಂತಹ ಈ ಲೇಖನಮಾಲಿಕೆಯಲ್ಲಿ ಸ್ಪಷ್ಟವಾದ ಒಂದು ಸ್ಥಾಯಿಸೂತ್ರವೂ ಇದೆ. ಅದು, ಇವತ್ತಿನ ಆಧುನಿಕ (ಮತ್ತು ಆಧುನಿಕೋತ್ತರ) ಜಗತ್ತುಗಳು “ಸಾಮಾನ್ಯಜ್ಞಾನ”ವೆಂಬಂತೆ ರೂಢಿಗೊಳಿಸಿಕೊಂಡಿರುವ ಸಿದ್ಧ ಯೋಚನಾಕ್ರಮಗಳ ವಿಮರ್ಶೆ; ಅರ್ಥಾತ್, ಬೌದ್ಧಿಕ ಸಿದ್ಧಮಾದರಿಗಳ ನಿರಾಕರಣೆ.

ಅಕ್ಷರ ಕೆ ವಿ

“ಬಾಲಕ” ರಾಮದಾಸ್

Posted ನವೆಂಬರ್ 9, 2007 by bookbazaar
ವರ್ಗಗಳು: ಫ್ರೆಷ್ ಪೇಜಸ್

ranew.jpg

ಪ್ರೊ. ಕೆ ರಾಮದಾಸ್ ಬಾಲ್ಯ
ಲೇ: ವಿಲಿಯಂ
ಪ್ರ: ಅಭಿರುಚಿ ಪ್ರಕಾಶನ, ನಂ.೩೮೬, ೧೪ನೆಯ ಮುಖ್ಯರಸ್ತೆ, ೩ನೆಯ ಅಡ್ಡರಸ್ತೆ, ಸರಸ್ವತೀಪುರ, ಮೈಸೂರು-೯, ದೂರವಾಣಿ: ೯೪೪೮೬೦೮೯೨೬
ಬೆಲೆ: ೪೫ ರೂ. ಪುಟಗಳು: ೬೦

ಪ್ರೊ. ಕೆ ರಾಮದಾಸ್ ನನ್ನ ಬಾಲ್ಯ ಸ್ನೇಹಿತ. ಇದು ಸುಮಾರು ೫೫ ವರ್ಷಗಳ ಸ್ನೇಹ. ರಾಮದಾಸ್ ಬರೆದಿರುವ ಒಂದು ಮಾತಿದೆ – “ನಾನೊಬ್ಬ ರಿಕಾರ್ಡ್ ಇಲ್ಲದ ಸಂಗೀತಗಾರನಂತೆ ಅಥವಾ ಜಾನಪದ ಹಾಡುಗಾರ ಎಂದರೆ ಸರಿಹೋಗಬಹುದು.” ಹೌದು, ಈವರೆಗೂ ರಾಮದಾಸನ ಹೋರಾಟಗಳು ಅಕ್ಷರಗಳಲ್ಲಿ ದಾಖಲೆಯಾಗಲಿಲ್ಲ. ತನ್ನ ಬಗ್ಗೆ ಪುಸ್ತಕ ತರುವುದರಲ್ಲಿ ರಾಮದಾಸ್ ಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲ. ತನ್ನ ಬದುಕಿನ ತುಂಬ ಪ್ರಾಂಜಲ ಹೋರಾಟ ನಡೆಸಿದ ವಿಚಾರವಾದಿ ರಾಮದಾಸನ ವಿಚಾರಗಳೇನು ಎಂದು ತೋರಿಸಲು ಒಂದು ಚಿಕ್ಕ ಪುಸ್ತಕವೂ ಇಲ್ಲ. ಇನ್ನು ಮುಂದೆ ಪುಸ್ತಕಗಳು ಬರಬಹುದು. ಸಾಗರದಲ್ಲಿ ತನ್ನ ಬಾಲ್ಯ ಕಳೆದ ರಾಮದಾಸನನ್ನು ಕುರಿತು ಪುಸ್ತಕ ಬರೆಯಬೇಕೆನ್ನುವುದು ನನ್ನ ಬಹಳ ದಿನಗಳ ಕನಸು. ಆದರೆ ಪ್ರಿಯಮಿತ್ರ ತೀರಿಕೊಂಡ ಮೇಲೆ ಬರೆಯುತ್ತಿರುವುದು ನೋವಿನ ಸಂಗತಿ.

ಹೋರಾಟಗಾರನೊಬ್ಬನ ಬದುಕು ಅವನ ಬಲ್ಯದಲ್ಲಿ ಹೇಗಿತ್ತು ಅನ್ನುವುದು ಮುಖ್ಯ. ರಾಮದಾಸ್ ವಿಚಾರಗಳು, ಹೋರಾಟದ ಪರಿ, ಸಾಧನೆ, ಸಂಕಷ್ಟಗಳ ಆಳ ಎತ್ತರಗಳ ಅಳತೆ ಮಾಡುವ ಗೋಜಿಗೆ ಹೋಗದೆ ರಾಮದಾಸನ ಬಾಲ್ಯದಲ್ಲಿ ನಾನು ಕಂಡುಂಡ ಕೆಲವು ನೆನಪುಗಳನ್ನು ಮಾತ್ರ ಇಲ್ಲಿ ಕೊಡುತ್ತಿರುವೆ.

(ಲೇಖಕನ ಮಾತುಗಳಿಂದ)

ಎಷ್ಟೋ ಹಾದಿ ಸವೆಸಿ ಬಂದೀನಿ

Posted ನವೆಂಬರ್ 9, 2007 by bookbazaar
ವರ್ಗಗಳು: ಫ್ರೆಷ್ ಪೇಜಸ್

enagi.jpg

ಬಣ್ಣದ ಬದುಕಿನ ಚಿನ್ನದ ದಿನಗಳು
ಏಣಗಿ ಬಾಳಪ್ಪನವರ ರಂಗಾನುಭವ ಕಥನ
ನಿರೂಪಣೆ: ಗಣೇಶ ಅಮೀನಗಡ
ಪ್ರ: ಪ್ರಸಾಧನ ಪ್ರಕಾಶನ, ಭಾರತೀನಗರ, ಬಿಜೈ, ಮಂಗಳೂರು-೫೭೫೦೦೪, ಮೊಬೈಲ್: ೯೪೪೮೧೯೧೨೪೯
ಬೆಲೆ: ೬೦ ರೂ. ಪುಟಗಳು: ೧೬೪

*

“ಬಣ್ಣದ ಬದುಕಿನಲ್ಲಿ ಕಷ್ಟ-ನಷ್ಟಗಳನ್ನು, ಸ್ತುತಿ, ನಿಂದೆಗಳನ್ನು ಸಹಿಸಿ, ಅವುಗಳನ್ನೇ ಜೀರ್ಣಿಸಿಕೊಂಡ ಕಲಾವಿದ ನಾನು. ನನ್ನ ಮ್ಯಾಲೆ ಅಪವಾದ, ಆರೋಪ ಕೊಟ್ಟವರು ನಮ್ಮವರೇ. ಅದು ಸಹಜ. ಆರೋಪ ಕೊಡುವವರು ಯಾವಾಗಲೂ ನಮ್ಮವರೇ ಆಗಿರುತ್ತಾರೆ. ಅಕ್ಕಮಹಾದೇವಿಯ ವಚನ ನೆನಪಿಗೆ ಬರುತ್ತಿದೆ. ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯ? ಹಂಗ ಎಷ್ಟೋ ಹಾದಿ ಸವೆಸಿ ಬಂದೀನಿ. ಮನುಷ್ಯ ಹುಟ್ಟುವಾಗ ಇಂಥವನಾಗುತ್ತೇನೆ ಎಂದು ಹುಟ್ಟಿ ಬರುವುದಿಲ್ಲ. ಜೀವನದ ಹೋರಾಟದಲ್ಲಿ ಏನೇನೋ ಆಗುತ್ತೇವೆ. ಹೇಗೋ ಆಗುತ್ತೇವೆ. ಸುದೈವದಿಂದ ನಾನು ಕಲಾವಿದನಾದೆ.”