ಚಾರು ಚರಿತ
ಕೆ ಕೇಶವ ಶರ್ಮ | ಅಭಿನವ | ಬೆಂಗಳೂರು | ದೂರವಾಣಿ: ೦೮೦-೨೩೫೦೫೮೨೫
*
ಹಸಿವನ್ನು ಹೇಗೆಂದು ದೂಷಿಸಲಿ ನಾನು? ಹಸಿವೇ ನನ್ನ ಬಾಲ್ಯದ ಐಶ್ವರ್ಯ.
(ಅಸ್ಸಾಮಿ ಕವಿತೆ: ಅಪರೂಪದ ಹಕ್ಕಿ, ಮೂಲ: ಸಮೀರ ತಂತಿ)
ಲೇಖಕನಾಗಿ ಈ ಮಾತುಗಳನ್ನು ಬರೆಯುವುದು ಸರಿಯೊ ತಪ್ಪೊ ನನಗೆ ಗೊತ್ತಿಲ್ಲ. ಆದರೆ ಕೆಲವು ಮಾತುಗಳನ್ನಂತೂ ನಾನು ಹೇಳಲೇಬೇಕಾಗಿದೆ. ಈ ಕಾದಂಬರಿಯನ್ನು ಬರೆದು ಹೆಚ್ಚುಕಡಿಮೆ ಏಳೆಂಟು ವರ್ಷಗಳಾದವು. ನನ್ನ ಮನಸ್ಸಿನಲ್ಲಿ ಇನ್ನು ಯಾವುದನ್ನೂ ಬರೆಯಲಾಗುವುದಿಲ್ಲ ಎನ್ನುವ ಹೊತ್ತಿನಲ್ಲಿ ಇಲ್ಲಿಯ “ಮುಸ್ಸಂಜೆ ಹೊತ್ತು ಗಣಪತಿ ಪುರಾಣ” ಎನ್ನುವ ಮೊದಲ ಅಧ್ಯಾಯವನ್ನು ಸಣ್ಣಕಥೆ ಎಂಬಂತೆ ಬರೆದೆ. ಆದರೆ ಅದು ಸಣ್ಣಕಥೆಯಾಗುವುದು ಶಕ್ಯವೇ ಇರಲಿಲ್ಲ. ನಾನು ಹೇಳಬೇಕಾದುದನ್ನು ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಮತ್ತೊಂದು ಅಧ್ಯಾಯವನ್ನು ಬರೆದೆ. ಹೀಗೆ ಬರೆಯುತ್ತಲೇ ಹೋದೆ.
ಖಾಲಿ ಕತ್ತಲ ಕೋಣೆಯಲ್ಲಿ ಅವಿತು ಕುಳಿತಿದ್ದ ಅನೇಕ ಸಂಗತಿಗಳನ್ನು ಒಂದೊಂದಾಗಿಯೇ ಅಗೆದು ತೆಗೆದು ನನ್ನ ಏಕಾಂತದ ಕ್ಷಣದಲ್ಲಿ ಜೋಡಿಸುತ್ತಾ ಹೋದೆ. ಕೋಶಾವಸ್ಥೆಯಲ್ಲಿದ್ದ ಮಣ್ಣು ಒಂದು ರೂಪವಾಯಿತು. ನನ್ನ ಖಾಸಗಿ ಜೀವನದ ಏಕಾಂತದ ಅದ್ಭುತ ಕ್ಷಣಗಳೆಂದರೆ, ಈ ಕಾದಂಬರಿಯಲ್ಲಿ ಬರುವ ಸಂಗತಿಗಳನ್ನು ನೆನಪಿಸುತ್ತಾ ಬರೆಯುತ್ತಾ ಹೋದದ್ದು.
(ಲೇಖಕನ ಮಾತುಗಳಿಂದ)
* * *
ತಮ್ಮ ಸುತ್ತಲಿನ ಸಾಮಾಜಿಕ ಪರಿಸರವನ್ನು ವ್ಯಾಪ್ತ ಎಡಪಂಥೀಯ ದೃಷ್ಟಿಕೋನದಿಂದ ಅರಿವಿಗೆ ತಂದುಕೊಳ್ಳಲು ಸಾಧ್ಯವೆನ್ನುವ ನಂಬಿಕೆಯನ್ನು ಒಂದು ಹಟದಲ್ಲಿ ನಡೆದುಕೊಂಡು ಬಂದ ಲೇಖಕ ಗೆಳೆಯ ಕೇಶವ ಶರ್ಮ. ಅವರ ಚಾರು ಚರಿತವು ಈ ಮಾತಿಗೆ ಸಾಕ್ಷಿಯಾಗಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಸಾಮಾಜಿಕ ಚರಿತ್ರೆಯ ಎಳೆಗಳನ್ನು ದಿನನಿತ್ಯದ ಮನುಷ್ಯ ವ್ಯಾಪಾರದ ವ್ಯಾಪ್ತಿಯಲ್ಲಿ, ಮಾನವ ಸಂಬಂಧಗಳ ದೀಪ್ತಿಯಲ್ಲಿ ಹಿಡಿಯುವ ಯತ್ನವೇ ಈ ಕೃತಿ.
(ಪುಸ್ತಕಕ್ಕೆ ಇರುವ ಶಿವರಾಮ ಪಡಿಕ್ಕಲ್ ಅವರ ಮಾತುಗಳಿಂದ)