ಚೆಲುವು ಮತ್ತು ಗೋವಿನ ಹಿಂದಿನ ಚಾರಿತ್ರಿಕ ನೋವು
ಶಾಲಭಂಜಿಕೆ
ಲೇ: ಡಾ. ಕೆ ಎನ್ ಗಣೇಶಯ್ಯ
ಪ್ರ: ಛಂದ ಪುಸ್ತಕ, ಬೆಂಗಳೂರು
ಬೆಲೆ: ೬೦ ರೂ. ಪುಟಗಳು: ೧೩೨
![]()
*
ಸರಯೂ ಚೈತನ್ಯ
ವಿಜ್ಞಾನಿಯೊಬ್ಬ ಚರಿತ್ರೆಯ ಕಾಡೊಳಗೆ ಸುತ್ತುತ್ತಾ, ಶಿಲೆಗಳ ಮನಸ್ಸು ಮುಟ್ಟುತ್ತಾ ಹೇಳಿದ ಕಥೆಗಳಿವೆ ಇಲ್ಲಿ. ಆದರೆ, ವಿಜ್ಞಾನಿಯೊಬ್ಬ ಕಥೆಯೆಂಬುದನ್ನು ಥ್ರಿಲ್ಲರ್ ಎಂದಷ್ಟೇ ಭಾವಿಸಿಬಿಡುವಲ್ಲಿನ (ಲೇಖಕ ಈ ಕಥೆಗಳನ್ನು ಕರೆದಿರುವುದೇ ಥ್ರಿಲ್ಲರ್ ಗಳು ಎಂದು) ಮಿತಿಗಳು ಅಥವಾ ಅಪಾಯಗಳೂ ಈ ಕಥೆಗಳನ್ನು ಅಲ್ಲಲ್ಲಿ ಭಗ್ನಗೊಳಿಸಿವೆ.
ಒಬ್ಬ ವಿಜ್ಞಾನಿಯಾಗಿ ಡಾ. ಕೆ ಎನ್ ಗಣೇಶಯ್ಯ ಅವರು ಹೊಂದಿರುವ ಕುತೂಹಲವೇ ಈ ಕಥೆಗಳ ಕಾಲುದಾರಿ. ಆ ದಾರಿಯಲ್ಲಿ ಸಾಗುತ್ತಾ ಅವರು ಜೀವಪರಿಸರದ ಕಡೆಗೆ ಮಾತ್ರವಲ್ಲದೆ, ಕಾಲದ ಪದರಿನಲ್ಲಿ ಹೂತುಹೋಗಿರುವ ಚರಿತ್ರೆಯ ಅವಶೇಷಗಳತ್ತಲೂ ಕಣ್ಣುಹಾಯಿಸುತ್ತಾರೆ. ಅದಕ್ಕೊಂದು ವೈಜ್ಞಾನಿಕ, ತಾರ್ಕಿಕ ಚೌಕಟ್ಟು ಕೊಡಲು ನೋಡುತ್ತಾರೆ. ಮರೆತ ಪುಟಗಳನ್ನು ಬೆಳಕಿಗೆ ಹಿಡಿಯುವ ಪ್ರಯತ್ನದಲ್ಲಿ ಈ ಕಥೆಗಳು ಬೆಳಗುತ್ತವೆ. ಆದರೆ ಈ ಕಥೆಗಳ ಸಮಸ್ಯೆಯಿರುವುದು, ನಿಗೂಢತೆಯ ಸ್ಪರ್ಶ ಕೊಡಬೇಕು ಎಂದು ಕಥೆಗಾರ ಆಸೆಪಡುವಲ್ಲಿ.
ಮೊದಲ ಕಥೆ “ಶಾಲಭಂಜಿಕೆ”ಯನ್ನೇ ತೆಗೆದುಕೊಳ್ಳೋಣ. ಹತ್ತು ವರ್ಷಕ್ಕೂ ಹೆಚ್ಚು ಕಾಲ ಹೆಂಡತಿಯನ್ನೂ ಮರೆತು ರಾಜ್ಯ ವಿಸ್ತಾರದ ಮೋಹದಲ್ಲಿ ಹೊರಟ ರಾಜನೊಬ್ಬ ಎದುರಿಸುವ ವ್ಯಂಗ್ಯವನ್ನು ಹೇಳುವ ಕಥೆ ಇದು. ಅಕಸ್ಮಾತ್ತಾಗಿ ಸುಂದರ ಕನ್ಯೆಯೊಬ್ಬಳ ವಿಗ್ರಹ ಕಂಡಾಗ ಅದರ ರೂಪದರ್ಶಿಯ ಬಗ್ಗೆ ಆತನಿಗೆ ಕುತೂಹಲವಾಗುತ್ತದೆ. ಅವಳು ಸಿಕ್ಕರೆ ತನ್ನವಳನ್ನಾಗಿ ಮಾಡಿಕೊಳ್ಳಬಹುದು ಎಂಬ ಲಂಪಟತನ ಹೆಡೆಯೆತ್ತುತ್ತದೆ. ಅದರ ಮೂಲ ಹುಡುಕಿಹೊರಟಾಗ ತನ್ನ ರಾಣಿಯೇ ಆ ರೂಪದರ್ಶಿ ಎಂಬುದು ತಿಳಿಯುತ್ತದೆ. ತನ್ನ ರಾಜ್ಯ ವಿಸ್ತಾರದ ಮೋಹವೇ ಅವನೆದುರು ಎಂದೆಂದೂ ಗೆಲ್ಲಲಾಗದ ವ್ಯಂಗ್ಯವಾಗಿ ನಿಲ್ಲುತ್ತದೆ. ಇನ್ನೊಂದು ಕಡೆಯಿಂದ, ಒಂದು ಹೆಣ್ಣಿನ ತಳಮಳವನ್ನು ಅಲಕ್ಷಿಸಿಬಿಡುವವರ ಚರಿತ್ರೆಯ ದಾಖಲಾತಿಯೂ ಆಗುತ್ತದೆ. ಆದರೆ ಇಂಥ ಕಥೆಗೆ ಲೇಖಕ ತರುವ ಕೊನೆ ಮಾತ್ರ ಹಾಸ್ಯಾಸ್ಪದ ಎನ್ನಿಸುವಂತಿದೆ. ಪ್ರಯಾಣದಲ್ಲಿ ತನಗೆ ಆ ಕಥೆ ಹೇಳಿದ ವ್ಯಕ್ತಿ ನಿಜವಾಗಿಯೂ ಆ ಟ್ರೈನಿನಲ್ಲಿದ್ದ ವ್ಯಕ್ತಿಯಾಗಿರಲೇ ಇಲ್ಲ, ಆ ಬರ್ಥ್ ನಲ್ಲಿ ಯಾರೂ ಟಿಕೆಟ್ ಪಡೆದು ಪ್ರಯಾಣಿಸಿರಲೇ ಇಲ್ಲ ಎಂದು ಅಚ್ಚರಿಯನ್ನು ಲೇಪಿಸಲು ನಿರೂಪಕ ಯತ್ನಿಸುತ್ತಾನೆ. ಚರಿತ್ರೆಯ ವಿವರಗಳ ನೆರವಿನಿಂದಲೇ ಒಂದು ಗಾಢವಾದ ಅನುಭವವನ್ನು ಉಳಿಸಬಹುದಾಗಿದ್ದ ಈ ಕಥೆಯನ್ನು ಇಂಥ ಥ್ರಿಲ್ಲೊಂದರ ಆಸೆಗೆ ಬೀಳಿಸಬೇಕಿತ್ತೇ?
ಇಂಥ ಮತ್ತೊಂದು ಕಥೆ “ಪಿರಮಿಡ್ಡಿನ ಗರ್ಭದಲ್ಲಿ”. ಇಲ್ಲಿ ಕೂಡ ರಾಜಕುಟುಂಬವೊಂದರ ಹುಳುಕುಗಳನ್ನು ಕಾಣಿಸಲಾಗಿದೆ. ಆದರೆ ಕಥೆ ಹೇಳಿದ ವೈದ್ಯನನ್ನು ನಿಗೂಢತೆಯ ತೆರೆಯ ಹಿಂದೆ ಇಡುವುದು ಅನವಶ್ಯಕವಾಗಿತ್ತು ಎಂದೇ ಅನ್ನಿಸುತ್ತದೆ. ಸ್ವಲ್ಪ ಸೂಕ್ಷ್ಮ ಕುಶಲತೆ ತೋರಿಸಿದ್ದರೆ, ಈ ಕಥೆಯ ವೈದ್ಯನನ್ನು, “ಶಾಲಭಂಜಿಕೆ”ಯ ಕಥೆ ಹೇಳುವ ವ್ಯಕ್ತಿಯ ಪಾತ್ರಗಳನ್ನು ಚರಿತ್ರೆ ಮತ್ತು ವರ್ತಮಾನವನ್ನು ಬೆಸೆಯುವ ಕೊಂಡಿಗಳಂತೆ ತೋರಿಸುವುದು ಸಾಧ್ಯವಿತ್ತು. “ಶಿಲಾವ್ಯೂಹ” ಎಂಬ ಕಥೆಯಲ್ಲಿ ಇದು ಕೊಂಚ ಮಟ್ಟಿಗೆ ಸಾಧ್ಯವಾದಂತಿದೆ. ಆ ಸಾಧ್ಯತೆಯಿಂದ ಈ ಎರಡೂ ಕಥೆಗಳು ತಪ್ಪಿಸಿಕೊಂಡಿವೆ.
ಇವುಗಳ ನಡುವೆ, “ಎದೆಯಾಳದಿಂದೆದ್ದ ಗೋವು” ನಿಜಕ್ಕೂ ಎದೆಗಿಳಿಯುವ ಕಥೆ. ಸೋಮನಾಥಪುರದ ಎಲ್ಲ ಗಂಡುಶಿಲ್ಪಗಳ ಎದೆಯಲ್ಲೂ ಸೂಕ್ಷ್ಮವಾಗಿ ಅವಲೋಕಿಸಿದರೆ ಬಸವನ ಮುಖ ಕಾಣುವುದರ ಹಿಂದಿನ ರಹಸ್ಯದ ಬಗ್ಗೆ ಇರುವ ಕಥೆ ಇದು. ಇವುಗಳ ಶಿಲ್ಪಿ ಮೂಲತಃ ಗೊಲ್ಲರವನಾಗಿದ್ದು, ಶಿಲ್ಪಿಯ ಮಗನಾಗಿ ಬೆಳೆಯುತ್ತಾನೆ. ತನ್ನ ನಿಜವಾದ ತಾಯಿಯ ಬಗ್ಗೆ ತಿಳಿದಾಗ ಅವನೊಳಗೆ ಕೋಲಾಹಲವೇ ಉಂಟಾಗುತ್ತದೆ. ಅವನೆದೆಯೊಳಗಿನ ನೋವೇ ಅವನ ಪ್ರತಿ ಶಿಲ್ಪದಲ್ಲೂ ಹೀಗೆ ಎದೆಯಾಳದಿಂದೆದ್ದ ಗೋವಾಗುತ್ತದೆ. ತನ್ನ ಆ ಕಲೆಗಾರ ಮಗನ ಬಗ್ಗೆ ಆತನ ನಿಜವಾದ ತಾಯಿ ಇಟ್ಟುಕೊಂಡಿರುವ ಅಭಿಮಾನವನ್ನು ದಾಖಲಿಸುವ ವಿವರಗಳೂ ಕಥೆಯಲ್ಲಿ ಬರುತ್ತವೆ. ಹೀಗೆ ಈ ಕಥೆ ತಂತಾನೇ ಒಂದು ರೂಪಕವಾಗುತ್ತದೆ. ಕಥೆಯನ್ನು ಓದಿ ಮುಗಿಸಿದಾಗ, ಕಲೆಯ ಬೆರಗಿನ ಮುಂದೆ ವಿಜ್ಞಾನದ ಮನಸ್ಸು ಮಂಡಿಯೂರಿದಂತೆ ಕಾಣಿಸುತ್ತದೆ.
ಈ ಸಂಕಲನದ “ನಂಜಾದ ಮಧು”, “ಹುಲಿಯ ಮಡಿಲ ಹುಳು” ಮತ್ತು “ಪರಾಗತ್ಯಾಗ” ವಿಜ್ಞಾನ ಲೋಕದಲ್ಲಿನ ಭ್ರಷ್ಟತೆಯ ಕಡೆ ಗಮನ ಸೆಳೆಯುತ್ತವೆ. ವಿಜ್ಞಾನ ಭ್ರಷ್ಟರು ಮತ್ತು ಉಗ್ರರ ಕೈಗೆ ಸಿಕ್ಕರೆ ಎಂಥ ಅನಾಹುತಗಳಾದಾವು ಎಂಬುದನ್ನು ಯಾರೂ ಊಹಿಸಬಹುದು. ಅವರ ವಿರುದ್ಧ ಗೆಲ್ಲಬೇಕು ಎಂಬುದೂ ಸಹಜ. ಆದರೆ ಇವತ್ತಿನ ವೈಭವೀಕೃತ ಹೀರೋನ ಚಿತ್ರವನ್ನೇ ಉಳ್ಳಂಥ ಸಿನೆಮಾ ಶೈಲಿಯ ಕಥೆ ಹೇಳಲು ಗಣೇಶಯ್ಯ ಅವರಂಥವರು ತಮ್ಮ ಶಕ್ತಿ ವ್ಯಯಿಸಬೇಕೇ? ವಿಜ್ಞಾನ ಲೋಕದ ಅಗೋಚರ ಅಪಚಾರಗಳು ಹಾಗೂ ಅವುಗಳ ಕಾರಣದಿಂದಾಗಿ ಎದುರಾಗಬಹುದಾದ ಸವಾಲುಗಳು ಅಷ್ಟು ಸರಳವಾಗಿ ನಿಭಾಯಿಸುವಂಥವಾ? ಹಾಗೆಂದು ಗಣೇಶಯ್ಯನವರೂ ಒಪ್ಪುತ್ತಾರಾ? ಈ ಕಥೆಗಳ ಇನ್ನೊಂದು ಆಯಾಮವನ್ನು ಯೋಚಿಸಬಹುದಾಗಿದೆ ಎಂಬ ಕಾರಣಕ್ಕಾಗಿ ಈ ಪ್ರಶ್ನೆಗಳು. ಮತ್ತು, ಗಣೇಶಯ್ಯ ಅವರು ಇಂಥ ಸಾಧಾರಣ ಶೈಲಿಯ ಕಥೆಗಳಿಗೂ ಆಚೆ ಕೈಚಾಚಬಲ್ಲ ತಾಕತ್ತನ್ನುಳ್ಳವರು ಎಂದು ಕಂಡಿರುವುದರಿಂದಲೇ ಈ ಪ್ರಶ್ನೆಗಳು ಹೆಚ್ಚು ಅಗತ್ಯವೆಂದು ತೋರುತ್ತದೆ.
ಇದೇನೇ ಇದ್ದರೂ, “ಶಾಲಭಂಜಿಕೆ”ಯೆಂಬ ಚೆಲುವಿನ ಹಿನ್ನೆಲೆಯಲ್ಲಿರುವ ಈ ಬದುಕಿನ ವೇದನೆಯನ್ನು ಕಂಡ ಕಥೆಗಾರ ಇಷ್ಟವಾಗುತ್ತಾನೆ. ಒಂದು ಕಾಲದ, ಒಂದು ಸಮಾಜದ, ಒಂದು ಜೀವದ ವೇದನೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಅಂಥವರ ಮನಸ್ಸಿಗೆ ಮಾತ್ರ ಚರಿತ್ರೆ ನಾಟೀತು. ಅಂಥ ಮನಸ್ಸಿನವರು ತಾವೇ ಚರಿತ್ರೆಯ ತೀರಕ್ಕೆ ನಡೆದುಹೋಗುತ್ತಾರೆ ಕೂಡ. ಹಾಗಲ್ಲದವರ ವರ್ತಮಾನದೊಳಕ್ಕೆ ಚರಿತ್ರೆಯನ್ನು ಒಯ್ಯುವುದೆಂದರೆ, ಅದು ಚರಿತ್ರೆಯ ಕತ್ತು ಹಿಸುಕುವ ಕೆಲಸವಷ್ಟೇ ಆದೀತು. ಆದ್ದರಿಂದಲೇ ಚರಿತ್ರೆಯನ್ನು ಓದಿಸಲು “ಥ್ರಿಲ್ಲರ್” ಎಂಬ ಹಣೆಪಟ್ಟಿಯ ಹಂಗು ಖಂಡಿತ ಬೇಡ ಎಂದು ಹೇಳಬೇಕೆನ್ನಿಸುತ್ತದೆ.
November 10, 2007 at 10:36 am
dear book bazaar
thanks for quoting my poem in avadhi bookmarker
the review on shaalabhanjike is good
i felt the same when i read the book.
ganeshaiah has a style. but his passion to make everything a thriller spoils his unique style
November 10, 2007 at 9:07 pm
bahala dinadinda ‘Shalabhanjike’ kollalu yochisuttidde. eegantU Sunday Shopping fix maDibiTTe. nALe koLLalE bEku, konDu OdalE bEku.
Book Bazaar nalli shopping maDOdeshTu chenda!
November 19, 2007 at 11:05 pm
ಗಣೇಶಯ್ಯನವರ ಎರಡು ಮೂರು ಕಥೆಗಳನ್ನು (ಸೋಮನಾಥಪುರ, ತಲಕಾಡಿನ ಹಿನ್ನಲೆಯವು) ಓದಿದ್ದೇನೆ. ಈ ಪುಸ್ತಕವನ್ನು ಕೊಂಡು ಓದಲೇಬೇಕೆನಿಸಿದೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.
-ನೀಲಾಂಜನ